ನಿನ್ನ ಬರುವಿಕೆಗೆ ಇಂದು ನಾ ಕಾದಿರುವೆ
ಬರುವೆಯಾ? ಬಿಡುವೆಯಾ? ಎಂಬ ತೊಳಲಾಟ ಎನಗೆ.
ಮನಸ್ಸಿಂದು ನಾಲ್ಕು ಗೋಡೆಗಳ ಮಧ್ಯೆ ಸಿಲುಕಿದೆ
ಸ್ವಚ್ಛಂದ ಹಾರಾಟದ ಲಹರಿ ಕಾಣದೆ.
ನನ್ನ ಕನಸುಗಳ ಮೆರವಣಿಗೆ ನಡೆದಿದೆ
ನಿನ್ನ ರಥದಲ್ಲಿ ಕುಳಿಸಿಕೊಂಡು.
ಮನವು ಮುದಗೊಂಡು ನಿನ್ನ ಬಯಸುತಿದೆ
ಸೇರುವೆ ನಿನ್ನ ಒಲುಮೆಗಳೊಳಕ್ಕೆ.
ಹಸಿರ ಹಾಸಿನ ಮೇಲೆ ಕುಣಿದಾಡುವಾಸೆ
ನಿನ್ನ ಜೊತೆ ಸೇರಿ ಪಡೆಯಬೇಕೆಂಬ ನಿರಾಳತೆ.
ನನ್ನ ನಾ ಹರಿಬಿಟ್ಟಿರುವೆ ಸಲಿಲದಂತೆ
ನೀನೆಂಬ ಇಳೆಗೆ ತಂಪ ನೀಡುವಂತೆ
ಬೀಸುವ ಮಂದ ಮಾರುತವು ಸ್ಪರ್ಶಿಸಿದೆ
ತಂಪೆನಿಸಿದರೂ ನಾ ಪುಳಕಗೊಂಡಿರುವೆ.
ಹುಣ್ಣಿಮೆಯ ರಾತ್ರಿಯಲಿ ಎದ್ದಿರುವೆ ಬೆಳಕಲ್ಲಿ
ಬರುವೆಯಾ ನೀ ಎನ್ನ ಬಳಿಗೆ?
ಪ್ರಿಯಾ,
ನಿನ್ನ ಸಾಲುಗಳಲ್ಲಿ ನನ್ನ ಜೀವವಿದೆ
ಬರದಿರಲಾರೆನೆ ನಾ ನಿನ್ನ ಬಳಿಗೆ?
ನನ್ನ ಮನಸ್ಸಿಂದು ನಿನ್ನ ಬೇಡುತಿದೆ
ಸ್ವಚ್ಛಂದದ ಲಹರಿಯಲ್ಲಿ ನೀನೇ ನನ್ನಲ್ಲಿರುವೆ.
ನನ್ನ ಕನಸುಗಳ ಇರುವೆಲ್ಲ ನಿನ್ನಲ್ಲಿವೆ
ಸಾಕಾರಗೊಳಿಸುವೆಯಾ ನೀ ನನಗೆ?
ಮನದ ಭಾವಗಳು ತಟ್ಟನೆ ನೆನಪಿಸಿವೆ
ನನ್ನ ಒಲುಮೆಗಳೆಲ್ಲ ನಿನ್ನ ಮುದಕ್ಕೆ.
ನೀ ಕುಣಿದಾಡುವ ಹಸಿರಹಾಸಮೇಲೆ ಕಾದಿರುವೆ
ಪಾಲುದಾರಳಾಗಬೇಕೆಂಬುದು ನಿನ್ನ ನಿರಾಳತೆಗೆ.
ನಿನ್ನ ಸಲಿಲವನು ನಾನು ಕಾಯ್ದಿಡುವೆ
ನನ್ನ ಆಕಾಂಕ್ಷೆಗಳಿಗೆ ನಿನ್ನದೇ ಬಯಕೆ.
ಪ್ರತಿ ಮಾರುತದಲ್ಲೂ ಕಳಿಸಿರುವೆ ಸ್ಪರ್ಶವನು
ನಿನ್ನ ಪುಳಕಗಳೆಲ್ಲ ನನ್ನ ಇರುವಿಕೆಗೆ.
ಹುಣ್ಣಿಮೆಯ ರಾತ್ರಿಯಲಿ ಸೇರಿಹರು ಕೃಷ್ಣ-ರಾಧೆಯರು
ಬಂದಾಗ ಯಮುನಾ ತೀರದ ಬಳಿಗೆ.
