* ಜೀವನದಲ್ಲಿ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳುವುದು ಕಷ್ಟ. ಅದರಲ್ಲೂ ಕೆಲವು ಸತ್ಯ ಸಂಗತಿಗಳನ್ನು ಹೇಳಿಕೊಳ್ಳುವುದು. ಅದಕ್ಕಿಂತಲೂ ಕಷ್ಟವಾದವು ಅದನ್ನು ಒಪ್ಪಿಕೊಳ್ಳುವುದು. $ ಹಲವು ನಕಾರಾತ್ಮಕ ಯೋಚನೆಗಳ ನಡುವೆ ಯಾವುದೋ ಒಂದು ಆಶಾಕಿರಣವೊಂದು ಹುಟ್ಟಿಕೊಳ್ಳುವುದು. # ಎಲ್ಲೋ ಒಂದು ಕಡೆ ಸಂಬಂಧಗಳು ಹಳಿ ತಪ್ಪಿದಾಗ ಆತ್ಮಶೋಧನೆ ಎಂಬುದು ಹುಟ್ಟಿಕೊಳ್ಳುವುದು. @ ಎಲ್ಲೋ ಒಂದು ಕಡೆ ಸುಮ್ಮನೆ ಏಕಾಂತವನ್ನು ಅನುಭವಿಸಿದಾಗ ನಮ್ಮನ್ನು ನಾವೇ ವಿಶ್ಲೇಷಿಸಿಕೊಳ್ಳುವುದು. ತನ್ಮೂಲಕ ಯಾವುದೋ ಕಂಡರಿಯದ ರೂಪದಲ್ಲಿ ನಮ್ಮ ಚೈತನ್ಯವೆಂಬುದು ತುಂಬಿಕೊಳ್ಳುವುದು. &ಮನದ ಸುತ್ತೆಲ್ಲವೂ ಗದ್ದಲಗಳೇ ತುಂಬಿಕೊಂಡಿರುವಾಗ ನೆಮ್ಮದಿ, ಶಾಂತಿಯನ್ನು ಹುಡುಕಿಕೊಳ್ಳುವುದು. ನಮ್ಮ ತನವನ್ನು ಹಾಗೂ ತನುವನ್ನು ಕಾಯ್ದುಕೊಳ್ಳುವುದು. ಇದೆಲ್ಲ ಇದ್ದಲ್ಲಿ ನಾವು ಗಟ್ಟಿಗರು. ದೃಢರು. ಈ ಸಾಲುಗಳನ್ನು ಬರೆಯುವಾಗ ನನ್ನಲ್ಲಿ ಹುಟ್ಟಿಬಂದ ಯೋಚನೆಗಳು ಹಲವಾರು.
* ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ತಾನು ಉದ್ದೀಪನ ಮದ್ದು ಪಡೆದದ್ದು ನಿಜ ಎಂದು ಹೇಳಿಕೊಂದಿದ್ದು. ಇಡೀ ಜಗತ್ತೇ ನಿಮ್ಮನ್ನು ಗೌರವಿಸುತ್ತಿರುವಾಗ, ಹಲವಾರು ವ್ಯಕ್ತಿಗಳಿಗೆ ನೀವೊಂದು ಚೇತನವಾದಾಗ , ಇಲ್ಲ ನಾನು ಮಾಡಿದ್ದು ತಪ್ಪು ಎಂದು ಹೇಳಿಕೊಳ್ಳುವುದು ಮಹಾನ್ ಗಟ್ಟಿಗತನವೇ ಸರಿ. ಆತ ಧೈರ್ಯಶಾಲಿ. ಅವನಿಗಾಗಿದ್ದ ಗೌರವ ಇನ್ನೊಂದು ತೂಕ ಹೆಚ್ಚಾಗಿತ್ತು. ಆ ಸಂದರ್ಭದಲ್ಲಿ ನೆನಪಾಗಿದ್ದು ಗಾಂಧೀಜಿಯವರು. 'ತಂದೆಯವರಲ್ಲಿ ತಾನೇ ಕದ್ದಿದ್ದೆ' ಎಂಬುದನ್ನು ಪತ್ರ ಮುಖೇನ ಹೇಳಿದ್ದರಲ್ಲ. ಮಾಡಿದ್ದನ್ನು ಒಪ್ಪಿಕೊಂಡಿದ್ದರಲ್ಲ. ನಾನು ಅಣ್ಣನಲ್ಲಿ ಹೇಳಿದ್ದೆ - ನಾನು ಮಾಡಿದ್ದೂ ತಪ್ಪು. ನನ್ನ ಶೈಕ್ಷಣಿಕ ಜೀವನದಲ್ಲಿ ಒಂದು ತಂತ್ರಜ್ಞಾನವನ್ನು ಸರಿಯಾಗಿ ಕಲಿಯಲಿಲ್ಲ. ಈಗ ಅದರ ಫಲವನ್ನು ಅನುಭವಿಸುತ್ತಿದ್ದೇನೆ ಎಂದೆ. ಬಂದ ಉತ್ತರ - "ಸರಿ, ಈಗ ಕಲಿತು ನೋಡು. ಕಲಿತು ನೀನು ಸಾಧಿಸಿದಾಗ ನಿನ್ನಲ್ಲುಂಟಾಗುವ ಸಂತೋಷವನ್ನು ಅನುಭವಿಸು" ಎಂದರು.
$ ನಾನ್ಯಾವುದನ್ನು ನಕಾರಾತ್ಮಕಗಳು ಎನ್ನುತ್ತೇನೆ? ನಾವು, ನಮ್ಮ ಓರಗೆಯವರ ಯಶಸ್ಸನ್ನು ಕಂಡಾಗ ಅಸೂಯೆ ಪಡುವುದು. ನಮ್ಮೆದುರಲ್ಲೇ ನಮ್ಮ ಗೆಳೆಯರನ್ನೋ, ಪರಿಚಿತರನ್ನೋ ಮೂರನೇ ವ್ಯಕ್ತಿಗಳು ಹೊಗಳಿದಾಗ ನಮಗೆ ನಮ್ಮವರ ಬಗ್ಗೆ ಉಂಟಾಗುವ ಮತ್ಸರಗಳು, ನಮ್ಮನ್ನು ಉಳಿದವರು ಗುರುತಿಸುತ್ತಿಲ್ಲ ಎನ್ನುವ identity crisis ಗಳು. ಇನ್ನೊಬ್ಬರಿಗೆ ಹೋಲಿಸಿಕೊಳ್ಳುವುದು. ಇವೆಲ್ಲವೂ ನಮ್ಮನ್ನು ಕುಗ್ಗಿಸುತ್ತವೆ. ಅದಕ್ಕೆ ನಾನು ಕಂಡುಕೊಂಡ ಉತ್ತರ - sport man's spirit. ರೋಜರ್ ಫೆಡರರ್ , ಪೀಟ್ ಸಾಂಪ್ರಾಸ್ ರನ್ನು ಸೋಲಿಸಿದಾಗ , ಸಾಂಪ್ರಾಸ್ ಯುಗ ಮುಗಿದು ಹೋಯಿತಾ? ಖಂಡಿತ ಇಲ್ಲ, ಈಗಲೂ ಸಾಂಪ್ರಾಸ್ ಟೆನಿಸ್ ಕ್ಷೇತ್ರ ಕಂಡ ಅಧ್ಬುತ ಆಟಗಾರರಲ್ಲೊಬ್ಬರು. ತೆಂಡುಲ್ಕರ್ ಅವರನ್ನು ಹೊಗಳುತ್ತಿರುವಾಗ ದ್ರಾವಿಡ್ ಹೇಗೆ ಅನುಭವಿಸಿದ್ದಿರಬಹುದು? ಖಂಡಿತ ಅವರಿಬ್ಬರೂ ಅದ್ಭುತ ಆಟಗಾರರು. ನಾನು ತಂದೆಯವರಲ್ಲಿ ಹೇಳಿದ್ದೆ - ಅಪ್ಪ, ನಿನ್ನ ಮಗ ಉಳಿದವರಷ್ಟು ಬುದ್ಧಿವಂತನಲ್ಲ. ಅದಕ್ಕೆ ಎಲ್ಲರಂತೆಯೇ ನೌಕರಿಯನ್ನು ಮಾಡುತ್ತಿದ್ದಾನೆ ಎಂದೆ. ಅವರಂದರು - "ಕಳೆದ ನಲವತ್ತು ವರ್ಷಗಳಿಂದ ನಾನು ಕೃಷಿಯನ್ನು ಮಾಡುತ್ತಾ ಬಂದಿದ್ದೇನೆ. ನನ್ನ ಓರಗೆಯವರಂತೆ ನಾನೂ ಶ್ರೇಮಂತನಾಗಬೇಕು ಎಂದೆನಾ? ನಾನು ಕೊರಗಿದ್ದೀನಾ? ಖಂಡಿತ ಇಲ್ಲ!, ನಿಮ್ಮಿಬ್ಬರನ್ನೂ ಓದಿಸಿದ್ದೇನೆ. ಸಮಾಜದಲ್ಲಿ ನ್ಯಾಯಯುತ ಜೀವನ ನಡೆಸುವ ಮಾರ್ಗಕ್ಕೆ ನಿಮ್ಮನ್ನು ಕರೆದುಕೊಂಡು ಬಂದಿದ್ದೇನೆ. ಸತ್ಯ ಮಾರ್ಗದಲ್ಲಿ ನಡೆದಿದ್ದೇನೆ. ಸೋಲು, ಗೆಲುವು ಇದ್ದಿದ್ದೇ. ಏಳು-ಬೀಳು ಇದ್ದಿದ್ದೇ. ಕೊನೆಗೆ ಉಳಿಯೋದು: ಹೇಗೆ ನೀನು ಪ್ರತೀ ಸೋಲಿನ ನಂತರವೂ ಗೆದ್ದೆ, ಒಂದು ಗೆಲುವನ್ನು ನೋಡಲು ಎಷ್ಟು ಸೋಲನ್ನು ಕಂಡೆ, ಅದರ ಹಿಂದಿನ ಶ್ರಮ, ದುಡಿತ,ಸಾಧನೆಗಳು, ಜೊತೆಯಲ್ಲಿ ಇನ್ನೊಬ್ಬರೂ ಗೆದ್ದಾಗ ಹೇಗೆ ನೀನೂ ಅಭಿಮಾನದಿಂದ ಚಪ್ಪಾಳೆ ತಟ್ಟಿದೆ, ನಿನ್ನನ್ನು ನೀನು ಹೇಗೆ ಮೇಲೆತ್ತುಕೊಂಡು ಬಂದೆ. ಹೀಗೆ ನೀನು ನಡೆದುಕೊಂಡು ಬಂದ ಹಾದಿ. ಅಷ್ಟೇ ಇರುವುದು" ಎಂದರು.
# ನಾವು ಎಷ್ಟರ ಮಟ್ಟಿಗೆ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಂಡು ಬಂದಿದ್ದೇವೆ? ಎಷ್ಟು ಸಂದರ್ಭಗಳಲ್ಲಿ ನಿಜವಾಗಿಯೂ ನಮ್ಮವರ ಬಗ್ಗೆ ನಮ್ಮವರೆಂಬ ಭಾವನೆ ತಳೆದಿದ್ದೇವೆ? ಎಷ್ಟು ಖಾಳಜಿ ವಹಿಸಿದ್ದೇವೆ? ಎಷ್ಟು ಮಿಡಿದಿದ್ದೇವೆ ? ಇನ್ನೊಬ್ಬರ ಕಷ್ಟಗಳಿಗೆ ಎಷ್ಟು ಸ್ಪಂದಿಸಿದ್ದೇವೆ? ಎಂಬುದು. ಹೀಗೆ ಗೆಳೆಯನಲ್ಲಿ ಆಂಧ್ರದ ವಿಭಜನೆಯ ಬಗ್ಗೆ ಮಾತಾಡುತ್ತಿರುವಾಗ, ಆತನೆಂದ - ರಾಜಕೀಯ ಸಂಘರ್ಷದಲ್ಲಿ, ವಿದ್ಯಾರ್ಥಿಗಳು, ಯುವಕರು ಆತ್ಮಹತ್ಯೆ ಮಾಡಿಕೊಂಡರು. ಅವರ ಮನೆಯವರನ್ನು ನೋಡಿಕೊಳ್ಳುವವರು ಯಾರು? ತಂದೆ -ತಾಯಂದಿರಿಗೆ ಹೇಗಾಗಿರಬೇಡ? ಎಂದನು. ಹೌದಲ್ಲವೇ ನಮ್ಮ ತಂದೆ-ತಾಯಿಯರನ್ನು, ನಮ್ಮ ಮನೆಯನ್ನು ನೋಡಿಕೊಳ್ಳುವರು ನಾವೇ. ನಮ್ಮ ಮನೆ, ನಮ್ಮ ದೇಶ ಎನ್ನುವ ಭಾವನೆ ಇಲ್ಲದವರಿಂದ ಮತ್ತೇನನ್ನು ನಿರೀಕ್ಷಿಸಲಾದೀತು? ಕನಸುಗಳಿವೆ -೧. ಜೀವನದಲ್ಲಿ ವೃದ್ಧಾಶ್ರಮವೊಂದನ್ನು ಕಟ್ಟಬೇಕು. ೨. ಹೋಟೆಲ್ಗಳಲ್ಲಿ ದುಡಿಯುವ, ಎಲ್ಲೋ ಟ್ರಾಫಿಕ್ ಗಳ ಮಧ್ಯೆ ಬಲೂನು ಮಾರುವ ಪೋರರಿಗೆ ಶಿಕ್ಷಣ ವ್ಯವಸ್ಥೆಯೊಂದನ್ನು ಕಲ್ಪಿಸಿಕೊಡಬೇಕು. ೩. ಪುರುಷನ ಅಗತ್ಯಗಳಿಗೆ ತನ್ನ ದೇಹವನ್ನು ಅರ್ಪಿಸಿದ ಸ್ತ್ರೀಯರೂ ಕೂಡ ಉಳಿದ ಸ್ತ್ರೀಯರಂತೆ ಸಮಾಜದ ಮೇರುವಾಹಿನಿಯಲ್ಲಿ ಬಾಳಬೇಕು. ತಮ್ಮ ತೀಟೆಗಳಿಗೆ, ಮಸ್ತಿ-ಮಜಾಗಳಿಗೆ ಬಳಸಿಕೊಂಡು, ನಂತರ ಸುಭಗರಂತೆ ಫೋಸು ಕೊಟ್ಟು ಬದುಕುವ ಪುರುಷರ ವಿರುದ್ಧ ಆಕ್ರೋಶವಿದೆ. ನೀವು ಗಂಡಸರೇ ಆದಲ್ಲಿ, ಜವಾಬ್ದಾರಿಯನ್ನು ತೆಗೆದುಕೊಂಡು, ಒಂದು ಮನೆಯನ್ನು ಕಟ್ಟಿ, ಕುಟುಂಬ ನಡೆಸಿ. ಅದರ ಬಿಟ್ಟು ಮೋಜು-ಮಸ್ತಿಗಳ ಹೆಸರಿನಲ್ಲಿ , ನಿಮ್ಮ ಅಗತ್ಯಗಳನ್ನು ತೀರಿಸಿಕೊಳ್ಳುವುದು ಬೇಡ. ಆ ಸ್ತ್ರೀಯರಿಗೊಂದು ಸಂಸ್ಥೆಯನ್ನು ಸ್ಠಾಪಿಸಬೇಕು.
@ ಸ್ವಲ್ಪ ಸಮಯ ನಮಗೋಸ್ಕರ ಮೀಸಲಿಟ್ಟು, ನಮ್ಮ ನಡತೆಗಳನ್ನು, ನಾವು ಪ್ರತಿಸ್ಪಂದಿಸಿದ್ದನ್ನು, ನಮ್ಮ ಜವಾಬ್ದಾರಿಗಳನ್ನು ಅವಲೋಕಿಸುತ್ತೇವೆ. ಹೀಗಿದ್ದಾಗ ಎಲ್ಲೋ ಚೈತನ್ಯವೆಂಬುದು ನಮ್ಮನ್ನು ತುಂಬಿಕೊಳ್ಳುತ್ತದೆ. ಯಾವುದೇ ಸ್ಥಿತಿಯಿರಲಿ ನಮ್ಮ ತನವನ್ನು , ನಮ್ಮ ಅದಮ್ಯ ಚೈತನ್ಯವನ್ನು ಮರೆಯಬಾರದು. ನಮ್ಮನ್ನೊಂದು ಅಪರಿಮಿತ ಉತ್ಸಾಹವೊಂದಕ್ಕೆ ತೆರೆದುಕೊಳ್ಳೋಣ. ಬೆಳೆಯೋಣ.